ಡಾ. ರಾಜ್ ಕುಮಾರ್ ಅವರ ಜೊತೆಗೆ ನಟಿಸಲು ಪುಣ್ಯ ಮಾಡಿರಬೇಕು ಹಿರಿಯ ನಟಿ ಲಕ್ಷ್ಮೀ ಅವರು ಹೀಗಂದಿದ್ದು ಯಾಕೆ..?
Updated:Tuesday, April 26, 2022, 22:46[IST]

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಡಾ. ರಾಜ್ ಕುಮಾರ್ ಅವರ ಜನ್ಮ ದಿನಾಚರಣೆ ಹಾಗೂ 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿತ್ತು. ಈ ವೇಳೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಾ.ರಾಜಕುಮಾರ್ ಪ್ರಶಸ್ತಿಯನ್ನು ಹಿರಿಯ ನಟಿ ಲಕ್ಷ್ಮಿ ಅವರಿಗೆ ಪ್ರದಾನ ಮಾಡಿದರು. ಹಿರಿಯ ಚಿತ್ರನಟಿ ಲಕ್ಷ್ಮೀ ಅವರಿಗೆ ಜೀವಮಾನ ಸಾಧನೆಗೆ ಡಾ. ರಾಜಕುಮಾರ್ ಪ್ರಶಸ್ತಿ ಲಭಿಸಿತು. ಇನ್ನು ಖ್ಯಾತ ನಿರ್ದೇಶಕ ಎಸ್ ನಾರಾಯಣ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಕೂಡ ಪ್ರದಾನ ಮಾಡಲಾಯ್ತು.
ಇದೇ ವೇಳೆ, ವಿಷ್ಣುವರ್ಧನ್ ಪ್ರಶಸ್ತಿಯನ್ನು ದಿ. ಜಿ ಎಂ ಲಕ್ಷ್ಮೀಪತಿ ಅವರಿಗೆ ಘೋಷಣೆ ಮಾಡಲಾಯಿತು. ಲಕ್ಷ್ಮೀಪತಿ ಅವರ ಪರವಾಗಿ ಅವರ ಪುತ್ರ ರಾಮ್ ಪ್ರಸಾದ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜಕುಮಾರ್ ಆಗಮಿಸಿದ್ದರು. ಇವರ ಜೊತೆಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಮ್, ಆಯುಕ್ತ ಡಾ. ಪಿ ಎಸ್ ಹರ್ಷ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಚಿನ್ನೇಗೌಡ ಹಾಗೂ ಇತರರು ಭಾಗಿಯಾಗಿದ್ದರು.
ಪ್ರಶಸ್ತಿ ಪಡೆದು ಮಾತನಾಡಿ ಹಿರಿಯ ನಟಿ ಲಕ್ಷ್ಮೀ ಅವರು, ಡಾ. ರಾಜ್ ಕುಮಾರ್ ಅವರ ಜೊತೆಗೆ ನಟಿಸಲು ಪುಣ್ಯ ಮಾಡಿರಬೇಕು. ಪುಣ್ಯ ಮಾಡಿದವರಿಗಷ್ಟೇ ರಾಜ್ ಕುಮಾರ್ ಅವರ ಜೊತೆಗೆ ತೆರೆ ಹಂಚಿಕೊಳ್ಳುವ ಅವಕಾಶ ದೊರೆಯುವುದು ಎಂದು ಹಮ್ಮೆಯಿಂದ ಹೇಳಿದರು. ಲಕ್ಷ್ಮೀ ಅವರು ಡಾ ರಾಜ್ ಕುಮಾರ್ ಅವರ ಜೊತೆಗೆ ಹಲವು ಚಿತ್ರಗಲಲ್ಲಿ ನಟಿಸಿದ್ದು, ಸದ್ಯ ಅವರು ಡ್ರಾಮಾ ಜ್ಯೂನಿಯರ್ಸ್ ಎಂಬ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿ ಭಾಗವಹಿಸುತ್ತಿದ್ದಾರೆ.(video credit : tv9 kannada)