ಪತ್ನಿಯ ಅಕ್ರಮ ಸಂಬಂಧ ಗೊತ್ತಿದ್ರೂ ಸುಮ್ಮನಿದ್ದ ಗಂಡ- ಆದ್ರೂ ಗಂಡನ ಪ್ರಾಣ ತೆಗೆದ ಹೆಂಡತಿ

ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನ ಕೊಲೆ ಮಾಡಿರುವಂತಹ ಘಟನೆ ಕೋಲಾರದಲ್ಲಿ ಜರುಗಿದೆ. ಕೋಲಾರ ತಾಲೂಕಿನ ಜನ್ನಘಟ್ಟ ಗ್ರಾಮದ ಜಾನಪದ ಕಲಾವಿದ ಕೃಷ್ಣಮೂರ್ತಿ ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ಪ್ರಕರಣದ ಸಂಬಂಧ ಮೃತ ಕಲಾವಿದ ಕೃಷ್ಣಮೂರ್ತಿ ಪತ್ನಿ ಸೌಮ್ಯ ಹಾಗೂ ಪ್ರಿಯಕರ ಶ್ರೀಧರ್ ಸೇರಿದಂತೆ ಕೊಲೆಗೆ ಸಹಾಯ ಮಾಡಿದ ಮತ್ತೋರ್ವ ಶ್ರೀಧರ್ ಎಂಬಾತನನ್ನ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. (ಬಂಧಿತ ಆರೋಪಿ ಸೌಮ್ಯ)
ನಿನ್ನೆ ರಾತ್ರಿ ತಾಲೂಕಿನ ಜನ್ನಘಟ್ಟ ರೈಲ್ವೆ ಬ್ರಿಡ್ಜ್ ಬಳಿ ಬೈಕ್ ನಿಂದ ಬಿದ್ದು ಜಾನಪದ ಕಲಾವಿದ ಕೃಷ್ಣಮೂರ್ತಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿತ್ತು. ಆದರೆ ಕೃಷ್ಣಮೂರ್ತಿ ತಲೆಗೆ ಬಿದ್ದಿದ್ದ ಗಾಯ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ನಂತರ ಪತ್ನಿಯೇ ಪ್ರಿಯಕರನಿಂದ ಕೊಲೆ ಮಾಡಿಸಿದ್ದಾಳೆ ಎನ್ನುವುದು ಬೆಳಕಿಗೆ ಬಂದಿದೆ.
ಕಳೆದ ಹಲವು ವರ್ಷಗಳಿಂದ ಕೃಷ್ಣಮೂರ್ತಿ ಸಂಸಾರದಲ್ಲಿ ಬಿರುಕು ಮೂಡಿತ್ತು. ಪತ್ನಿ ಸೌಮ್ಯ ಮಾವನ ಮಗನಾದ ಶ್ರೀಧರ್ ನೊಂದಿಗೆ ಸಂಬಂಧ ಹೊಂದಿದ್ದಳು ಎನ್ನಲಾಗಿತ್ತು. ಈ ವಿಚಾರವಾಗಿ ಕೃಷ್ಣಮೂರ್ತಿ ಹಾಗೂ ಪತ್ನಿ ಸೌಮ್ಯ ನಡುವೆ ಜಗಳ ಆಗುತ್ತಿದ್ದು, ಹಿರಿಯರ ಸಮ್ಮುಖದಲ್ಲಿ ನ್ಯಾಯಪಂಚಾಯಿತಿ ಆಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ನ್ಯಾಯಪಂಚಾಯಿತಿ ಬಳಿಕವೂ ದಂಪತಿಗಳ ನಡುವೆ ಕಲಹ ಬಗೆಹರಿಯದ ಹಿನ್ನಲೆ ಪ್ರಿಯಕರನೊಂದಿಗೆ ಸೇರಿ ಪತಿಯನ್ನ ಕೊಲೆ ಮಾಡುವ ಖತರ್ನಾಕ್ ಕೆಲಸಕ್ಕೆ ಪತ್ನಿ ಸೌಮ್ಯ ಪ್ಲಾನ್ ಮಾಡಿದ್ದರು. ಪೂರ್ವ ಯೋಜಿತ ಪ್ಲಾನ್ನಂತೆ ನಿನ್ನೆ ರಾತ್ರಿ 8 ಗಂಟೆ ಸಮಯದಲ್ಲಿ ಕೋಲಾರದಿಂದ ಮನೆಗೆ ತೆರಳುತ್ತಿದ್ದ ಕೃಷ್ಣಮೂರ್ತಿಯನ್ನ, ಜನ್ನಘಟ್ಟ ರೈಲ್ವೆ ಬ್ರಿಡ್ಜ್ ಬಳಿ ಡ್ರಾಪ್ ಕೇಳುವ ನೆಪದಲ್ಲಿ ಬೈಕ್ ನಿಲ್ಲಿಸಿದ ಪ್ರಿಯಕರ ಶ್ರೀಧರ್ ಹಾಗೂ ಆತನ ಸ್ನೇಹಿತ ಶ್ರೀಧರ್, ಕೃಷ್ಣಮೂರ್ತಿ ನಿಲ್ಲಿಸಿದ ಕೂಡಲೇ ರಾಡ್ ನಿಂದ ತಲೆಯ ಹಿಂಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಘಟನೆ ಬಳಿಕ ಸ್ಥಳದಿಂದ ಆರೋಪಿಗಳು ಪರಾರಿಯಾಗಿದ್ದು, ಕೃಷ್ಣಮೂರ್ತಿ ರಕ್ತದ ಮಡುವಿನಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಜೊತೆಗೆ ಪತ್ನಿ ಸೌಮ್ಯ ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದಾಳೆ. ಇನ್ನೂ ಪತ್ನಿ ಸೌಮ್ಯ, ಪ್ರಿಯಕರ ಶ್ರೀಧರ್ ಹಾಗೂ ಅತನ ಸ್ನೇಹಿತ ಶ್ರೀಧರ್ ಮೂವರನ್ನ ವಶಕ್ಕೆ ಪಡೆದಿರುವ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.